Promotion Counselling Guidelines-2025: ಶಿಕ್ಷಕರು ತಿಳಿಯಲೇಬೇಕಾದ ಮಾರ್ಗಸೂಚಿಗಳು
Promotion Counselling Guidelines-2025:2025-26ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಕೌನ್ಸಿಲಿಂಗ್ ಮೂಲಕ ಬಡ್ತಿ ನೀಡುವ ಕುರಿತು.
ಕರ್ನಾಟಕ ಸರ್ಕಾರಿ ನೌಕರರ (ಜೈಷತಾ) ನಿಯಮಗಳು-1957ರ ನಿಯಮಗಳ ಪ್ರಕಾರ 2025-26ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ (HM) ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯ ಶಿಕ್ಷಕರ (SHM) ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಲು ಉದ್ದೇಶಿಸಿದೆ. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020ರ ಸೆಕ್ಷನ್ 3ರ ಪ್ರಕಾರ ‘ಸಿ’ ವೃಂದದ ಹುದ್ದೆಗಳಿಗೆ ಬಡ್ತಿ ನೀಡಲು ಕ್ರಮವಹಿಸಬೇಕಾಗುತ್ತದೆ.
ಪ್ರಯುಕ್ತ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಜೇಷ್ಟತಾ ನಿಯಮಾನುಸಾರ ಆಯಾ ವೃಂದವಾರು ಪ್ರಕಟಿಸಲಾಗಿರುವ ಜಿಲ್ಲಾ ಅಂತಿಮ ಜೇಷ್ಟತಾ ಪಟ್ಟಿಗೆ ಅನುಗುಣವಾಗಿ ಬಡ್ತಿಯನ್ನು ನೀಡಬೇಕಾಗಿದ್ದು ಪ್ರಕಟಿತ ವೇಳಾಪಟ್ಟಿಯಂತೆ ಜಿಲ್ಲಾ ಹಂತದಲ್ಲಿ ಎಲ್ಲಾ | ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ದಿನಾಂಕ: 01/01/2025 ರಲ್ಲಿದ್ದಂತೆ ಅಂತಿಮಗೊಳಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ತಿಳಿಸಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಎದುರಾಗಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಕ್ರಮ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪ ನಿರ್ದೇಶಕರು(ಆಡಳಿತ)ರವರುಗಳ ಹಂತದಲ್ಲಿ ರಾಜ್ಯದಾದ್ಯಂತ ಏಕಕಾಲದಲ್ಲಿ ಕೌನ್ಸಿಲಿಂಗ್ ಮೂಲಕ ಬಡ್ತಿ ಪ್ರಕ್ರಿಯೆಗಳು ನಡೆಯುತ್ತವೆ.
ಈ ಸಂದರ್ಭದಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ವ್ಯಕ್ತಿಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಹಾಗೂ ಅಂಗವೈಕಲ್ಯತೆಯನ್ನು ಗುರುತಿಸುವ ಕುರಿತಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಸೂಚನೆಯನ್ನು ಹೊರಡಿಸಿ ತಜ್ಞರ ಸಮಿತಿಯ ಸಭೆಯಲ್ಲಿ ಗುರುತಿಸಿರುವ ಅಂಗವೈಕಲ್ಯತೆಯ ವರ್ಗಗಳನ್ನು ನಿಗಧಿಪಡಿಸಲಾಗಿದ್ದು ಅದರಂತೆ ಕ್ರಮವಹಿಸತಕ್ಕದ್ದು.
ಬಡ್ತಿ ಪ್ರಕ್ರಿಯೆಯ ಕೌನ್ಸಿಲಿಂಗ್ ಕೈಗೊಳ್ಳುವಾಗ ಈ ಕೆಳಕಂಡ ಮಾರ್ಗಸೂಚಿ ಅಂಶಗಳನ್ನು ಅನುಸರಿಸಲು ತಿಳಿಸಿದೆ.
1. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಂತ್ರಣ ಕಾಯ್ದೆ- 2020ರ ಸೆಕ್ಷನ್-3 ರಂತೆ’ಸಿ’ ವಲಯದಲ್ಲಿನ ಶಾಲೆಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ‘ಸಿ’ ವಲಯದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಸಂಬಂಧಿಸಿದ ಶಾಲೆಗಳಲ್ಲಿ ತೆರವುಗೊಳಿಸಬೇಕಿದೆ. ಅಂದರೆ, ‘ಬಿ’ ವಲಯದಲ್ಲಿ ಕರ್ತವ್ಯ ನಿರತ ಹಿರಿಯ ಮುಖ್ಯ ಶಿಕ್ಷಕರನ್ನು ‘ಎ’ ವಲಯದ ಶಾಲೆಗಳಿಗೆ ಹಾಗೂ ‘ಸಿ’ ವಲಯದಲ್ಲಿನ ಕರ್ತವ್ಯನಿರತ ಹಿರಿಯ ಮುಖ್ಯ ಶಿಕ್ಷಕರನ್ನು ‘ಬಿ’ ವಲಯದಲ್ಲಿನ ಶಾಲೆಗೆ ಕೌನ್ಸಿಲಿಂಗ್ ಮೂಲಕ ಸ್ಥಳಾಂತರಿಸುವ ಮೂಲಕ ‘ಸಿ’ ವಲಯದಲ್ಲಿ ಖಾಲಿ ಹುದ್ದೆಗಳನ್ನು ಲಭ್ಯಪಡಿಸಬೇಕಾಗುತ್ತದೆ.
2. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಂತ್ರಣ ಕಾಯ್ದೆ-2020ರ ಸೆಕ್ಷನ್-10 ರ ಪ್ರಕಾರ ವಲಯ ವರ್ಗಾವಣೆಯಲ್ಲಿ ಹಿರಿಯ ಮುಖ್ಯ ಶಿಕ್ಷಕರಿಗೆ ನಿಯಮಾನುಸಾರ ಆಧ್ಯತೆಯನ್ನು ಪರಿಗಣಿಸುವುದು.
3. ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಜೇಷ್ಟತಾ ಪಟ್ಟಿಯನ್ನು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು(ಆಡಳಿತ) ಇವರು ಪ್ರಕಟಿಸತಕ್ಕದ್ದು, ದಿನಾಂಕ: 31/12/2025 ರಲ್ಲಿದ್ದಂತೆ ಜಿಲ್ಲೆಯಲ್ಲಿ ನಿವೃತ್ತಿ ಮರಣ ರಾಜೀನಾಮೆ ಇತ್ಯಾದಿ ಕಾರಣಗಳಿಂದ ತೆರವಾಗಿ ಲಭ್ಯವಿರುವ / ಇ.ಇ.ಡಿ.ಎಸ್ ನಲ್ಲಿ ಇಂದೀಕರಣವಾಗಿರುವ ಹಿರಿಯ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳ ಸಂಖ್ಯೆಯನ್ನು ಮತ್ತು ಈಗಾಗಲೇ ಇಲಾಖೆಯಿಂದ ವರ್ಗಾವಣೆ ನಂತರ ನಿಗಧಿಪಡಿಸಿದ (ತಂತ್ರಾಂಶದಲ್ಲಿ) ಹೊರಡಿಸಲಾಗಿರುವ ಇ-ರಿಜಿಸ್ಟರ್ನಲ್ಲಿ ಮಂಜೂರಾಗಿರುವ ವೃಂದವಾರು/ ತಾಲ್ಲೂಕುವಾರು/ ಜಿಲ್ಲಾವಾರು ಹುದ್ದೆ ಮಂಜೂರಾತಿಯ ಮಿತಿಯೊಳಗೆ ಖಾಲಿಹುದ್ದೆಗಳು ಲಭ್ಯವಿರುವ ಬಗ್ಗೆ ತಂತ್ರಾಂಶದಲ್ಲಿ ಮತ್ತೊಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು.
4. ಉಲ್ಲೇಖ-7 ರ ಪ್ರಕಾರ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಕುರಿತ ಅಧಿಸೂಚನೆಯಲ್ಲಿ ನಿಗದಿಪಡಿಸಲಾಗಿರುವ ಕೋಷ್ಟಕದ ಪ್ರಕಾರ 250 ಕ್ಕಿಂತ ಹೆಚ್ಚಿನ ದಾಖಲಾತಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮಾತ್ರ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಯನ್ನು ಬಡ್ತಿಗೆ ಪರಿಗಣಿಸತಕ್ಕದ್ದು. ಪ್ರಸ್ತುತ ಯಾವುದೇ ಶಾಲೆಯಲ್ಲಿ 250 ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇರುವ ಶಾಲೆಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಯನ್ನು ಖಾಲಿ ಹುದ್ದೆ ಎಂದು ಪರಿಗಣಿಸತಕ್ಕದ್ದಲ್ಲ.
5. ಜಿಲ್ಲೆಗಳಲ್ಲಿ ಹಿರಿಯ ಮುಖ್ಯ ಶಿಕ್ಷಕರ ‘ಎ’ ‘ಬಿ’ ‘ಸಿ’ ವಲಯದ ಖಾಲಿ ಹುದ್ದೆಗಳನ್ನು ಮೊದಲು ಗುರುತಿಸಿಕೊಳ್ಳಬೇಕು. ವಲಯದ ವರ್ಗಾವಣೆಯ ಅಗತ್ಯತೆ ಕಂಡುಬಂದಲ್ಲಿ ಹಿರಿಯ ಮುಖ್ಯ ಶಿಕ್ಷಕರ ಬ್ರೇಷ್ಟತೆಗೆ ಅನುಗುಣವಾಗಿ ‘ಬಿ’ ವಲಯದಿಂದ ‘ಎ’ ವಲಯಕ್ಕೂ ಮತ್ತು ‘ಸಿ’ ವಲಯದಿಂದ ‘ಬಿ’ ವಲಯಕ್ಕೂ ಶಿಕ್ಷಕರನ್ನು ಸ್ಥಳಾಂತರಿಸುವ ಮೂಲಕ ‘ಸಿ’ ವಲಯದ ಖಾಲಿ ಹುದ್ದೆಯನ್ನು ಸೃಜಿಸಿಕೊಳ್ಳತಕ್ಕದ್ದು.
6. ಬಡ್ತಿಗೆ ಅರ್ಹರಿರುವ ಮುಖ್ಯ ಶಿಕ್ಷಕರ ಅಂತಿಮ ಜೇಷ್ಠತಾ ಪಟ್ಟಿಯನ್ನು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಇವರು ಪ್ರಕಟಿಸತಕ್ಕದ್ದು.
“ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ 2020 ಸೆಕ್ಷನ್ 3(2) ಪ್ರಕಾರ ಒಬ್ಬ ಶಿಕ್ಷಕನು ವಲಯ’ಸಿ’ ನಲ್ಲಿ ನಿರಂತರವಾಗಿ ಹತ್ತು ವರ್ಷಗಳಿಗೂ ಅಥವಾ ಸಂಚಿತವಾಗಿ ವಲಯ’ಸಿ’ ನಲ್ಲಿ ಹದಿನೈದು ವರ್ಷಗಳಿಗೂ ಹೆಚ್ಚಾಗಿ ಈಗಾಗಲೇ ಸೇವೆ ಸಲ್ಲಿಸಿದ್ದಲ್ಲಿ ಅಂಥಹ ಶಿಕ್ಷಕರನ್ನು ಬಡ್ತಿಯ ಮೇಲೆ ಖಾಲಿ ಹುದ್ದೆಗಳ ಲಭತೆಗೆ ಒಳಪಟ್ಟು ಕೌನ್ಸಿಲಿಂಗ್ ಮೂಲಕ ವಲಯ’ಬಿ ಅಥವಾ ವಲಯ’ವ’ ಯಲ್ಲಿನ ಶಾಲೆಗೆ ಸ್ಥಳ ನಿಯುಕ್ತಿ ಮಾಡಬಹುದಾಗಿದೆ
ಈ ಕುರಿತಂತೆ ಸಕ್ಷಮ ಪ್ರಾಧಿಕಾರಿಗಳು ಪ್ರತಿಯೊಂದು ಶಾಲೆಗಳ ಮಕ್ಕಳ ದಾಖಲಾತಿಯನ್ನು ದಿನಾಂಕ: 31/12/2025 ರಲ್ಲಿದ್ದಂತೆ SATS ನಲ್ಲಿ ಕಡ್ಡಾಯವಾಗಿ ಖಚಿತಪಡಿಸಿಕೊಳ್ಳತಕ್ಕದ್ದು. ಒಂದು ವೇಳೆ ಸೆದರಿ ಶಾಲೆಯಲ್ಲಿ ನಿಗದಿತ ಮಾನದಂಡಕ್ಕಿಂತ ಮಕ್ಕಳ ಸಂಖ್ಯೆ ಕಡಿಮೆಯಾದಲ್ಲಿ ಮುಂದಿನ ದಿನದಲ್ಲಿ ನಡೆಯುವ ಹೆಚ್ಚುವರಿ (Rationalization) ಪ್ರಕ್ರಿಯೆಯಲ್ಲಿ ನಿಯಮಾನುಸಾರ ಹಿರಿಯ ಮುಖ್ಯಶಿಕ್ಷಕರ ಹುದ್ದೆಯನ್ನು ಹೆಚ್ಚುವರಿ ಎಂದು ಗುರುತಿಸಿ ನಿಯಮಾನುಸಾರ ಅಗತ್ಯವಿರುವೆಡೆ ಸ್ಥಳಾಂತರಗೊಳಿಸಲಾಗುವುದು.
ಉಲ್ಲೇಖ-6 ರ ಪ್ರಕಾರ ಅಂಗವೈಕಲ್ಯತೆಯ ಕುರಿತಾಗಿ ನಮೂನೆ 4. 5 ಮತ್ತು 6 ರಲ್ಲಿ ನಿಗಧಿಪಡಿಸಿರುವ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿರುವ ಶಿಕ್ಷಕರನ್ನು ಮಾತ್ರ ಅಂಗವೈಕಲ್ಯತೆಯ ಮೀಸಲಾತಿಯಲ್ಲಿ ಅರ್ಹತೆ ಇದಲ್ಲಿ ನಿಯಮಾನುಸಾರ ಪರಿಗಣಿಸುವುದು. ಶಾಶ್ವತ ಅಂಗವಿಕಲತೆಯ ಪ್ರಮಾಣ ಪತ್ರವನ್ನು (UDID) ಪಡೆದಿದ್ದರೂ ಸಹ ಸದರಿ Unique Disability ID ನಲ್ಲಿ ಅಂಗವಿಕಲತೆಯ (CATEGORY ABBREVIATIONS) ವಿಧದ ಬಗ್ಗೆ ಸ್ಪಷ್ಟತೆ ಇಲ್ಲದಿರುವದರಿಂದ ಹಾಗೂ ಅಂಗವೈಕಲ್ಯತೆಯ Annexure-1 ರಲ್ಲಿ ನಿಗಧಿಪಡಿಸಿರುವ ಅಂಗವೈಕಲ್ಯತೆಯ ಪ್ರಮಾಣ ಮತ್ತು ವಿಧವನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ನಮೂನೆಯಲ್ಲಿರುವಂತೆ ಅಂಗವಿಕಲ ಶಿಕ್ಷಕರು ತ್ರಿಸದಸ್ಯೆ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕಾಗುತ್ತದೆ. ಇದನ್ನು ಉಪನಿರ್ದೆಶಕರು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳತಕದ್ದು.
ಯಾವುದೇ ಶಿಕ್ಷಕರು ಸುಳ್ಳು ಮಾಹಿತಿ/ದಾಖಲೆ ನೀಡಿ ಬಡ್ತಿ ಪಡೆದಿದ್ದಲ್ಲಿ ಅಂತಹಾ ಶಿಕ್ಷಕರ ಬಡ್ತಿಯನ್ನು ರದ್ದುಪಡಿಸಲಾಗುವುದು ಹಾಗೂ ಅಂತಹಾ ಶಿಕ್ಷಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು. ಅಂಗವೈಕಲ್ಯತೆ ಹೊಂದಿದ್ದ ಶಿಕ್ಷಕರನ್ನು ಮಾತ್ರ ಬಡ್ತಿಗೆ ನಿಯಮಾನುಸಾರ ಪರಿಗಣಿಸುವುದು. ಶಿಕ್ಷಕರ ಅವಲಂಬಿತರು ಅಂಗವೈಕಲ್ಯತೆಯನ್ನು ಹೊಂದಿದ್ದಲ್ಲಿ ಅಧತೆಯನ್ನು/ಮೀಸಲಾತಿಯನ್ನು ಬಯಸಿದ್ದಲ್ಲಿ ಅಂತಹ ಪ್ರಕರಣವನ್ನು ಬಡ್ತಿಗೆ ಪರಿಗಣಿಸಲು ಅವಕಾಶವಿರುವುದಿಲ್ಲ.
ಯಾವುದೇ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜಾರಿಯಲ್ಲಿರುವ ಪ್ರಕರಣಗಳಲ್ಲಿ ಅಂತಹ ಮುಖ್ಯ ಶಿಕ್ಷಕರನ್ನು ಬಡ್ತಿಗೆ ಪರಿಗಣಿಸಲು ಅವಕಾಶವಿರುವುದಿಲ್ಲ.
ಅಂಗವಿಕಲ ಮೀಸಲಾತಿಯಲ್ಲಿ ಬಡ್ತಿ ಪಡೆದ ಶಿಕ್ಷಕರ ತ್ರಿಸದಸ್ಯ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಉಪನಿರ್ದೇಶರು(ಆಡಳಿತ) ಇವರು ತಮ್ಮ ಕಛೇರಿ ಕಡತದಲ್ಲಿ ಸಂರಕ್ಷಿಸಿಡತಕ್ಕದ್ದು. ಸದರಿ ಪ್ರಮಾಣ ಪತ್ರದ ದೃಢೀಕೃತ ಜೆರಾಕ್ಸ್ ಪ್ರತಿಯನ್ನು ಹಾಗೂ ಜಿಲ್ಲಾ ಹಂತದ ಬಡ್ತಿ ಪಕ್ರಿಯೆಯಲ್ಲಿ ಕೈಗೊಂಡ ಕ್ರಮದ ವಿವರವಾದ ಅಂಕಿ ಅಂಶಗಳ ವರದಿಯನ್ನು ಆಯಾ ವ್ಯಾಪ್ತಿಯ ವಿಭಾಗೀಯ ಸಹನಿರ್ದೇಶಕರಿಗೆ ಬಡ್ತಿ ಪ್ರಕ್ರಿಯೆ ಮುಕ್ತಾಯವಾದ ಒಂದು ವಾರದ ಒಳಗಾಗಿ ಕಡ್ಡಾಯವಾಗಿ ವರದಿ ಸಲ್ಲಿಸತಕ್ಕದ್ದು.
ಸಕ್ಷಮ ಪ್ರಾಧಿಕಾರಿಗಳು ಜಿಲ್ಲಾ ಹಂತದಲ್ಲಿ ಬಡ್ತಿ ಕೌನ್ಸಿಲಿಂಗ್ಗೆ ಪ್ರಸ್ತುತ ಜಾರಿಯಲ್ಲಿರುವ 100 ಬಿಂದುಗಳ Roster ವರ್ತುಲದಂತೆ ಮೀಸಲಾತಿ ಬಿಂದುವನ್ನು ಗುರುತಿಸಿ ಬಡ್ತಿ ಕೌನ್ಸಿಲಿಂಗ್ 1 : 1 ಅಂತಿಮ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ಸದರಿ ಮುಂಬಡ್ತಿ ಮೀಸಲಾತಿ ಬಿಂದುಗಳು ಪ್ರಸಕ್ತ ಸಾಲಿನ ಬಡ್ತಿಯಿಂದ ಪ್ರಾರಂಭವಾಗುತ್ತದೆ.
ಇನ್ನು ಮುಂದೆ ಮುಂದಿನ ಆದೇಶದವರೆಗೆ ಇದೇ ಮಾದರಿಗಳನ್ನು ಮುಂದುವರೆಸಿಕೊಂಡು ಹೋಗತಕ್ಕದ್ದು Roster ವರ್ತುಲವನ್ನು ಅನುಸರಿಸಿ ಮುಂಬಡ್ತಿ ನೀಡುವಾಗ ಯಾವ ಯಾವ ಬಿಂದುವಿನವರೆಗೆ ಮುಂಬಡ್ತಿ ನೀಡಲಾಗಿತ್ತೋ ಆ ನಂತರದ ಬಿಂದುವಿನಿಂದ ಮುಂದುವರೆಸತಕ್ಕದ್ದು. ಬಿಂದು ಗುರುತಿಸುವಿಕೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗತಕದಲ್ಲ.
ಮೇಲೆ ವಿವರಿಸಲಾದ ಅಂಶಗಳನುಸಾರ ಸಕ್ಷಮ ಪ್ರಾಧಿಕಾರಿಗಳಾದ ಉಪನಿರ್ದೇಶಕರು(ಆಡಳಿತ) ಇವರ ಹಂತದಲ್ಲೇ ಈ ಕೆಳಕಂಡ ವೇಳಾಪಟ್ಟಿಯನುಸಾರ ಬಡ್ತಿ ಪ್ರಕ್ರಿಯೆಯನ್ನು ರಾಜ್ಯಾದಾದ್ಯಂತ ಏಕಕಾಲಕ್ಕೆ ಕೈಗೊಳ್ಳಲು ಅಧಿಕೃತ ಜ್ಞಾಪನವನ್ನು ಪ್ರಕಟಿಸಲಾಗಿದೆ.

ಪಾರದರ್ಶಕತೆಯಿಂದ ಯಾವುದೇ ಲೋಪವಾಗದಂತೆ ಕ್ರಮವಹಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ಸೂಚಿಸಿದೆ. ಮೇಲೆ ವಿವರಿಸಿರುವ ಅಂಶಗಳನ್ನು ಉಲ್ಲಂಘಿಸಿ ಇದರಲ್ಲಿ ಯಾವುದೇ ಲೋಪವಾದಲ್ಲಿ ಸಕ್ಷಮ ಪ್ರಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.



